Bantwala: ಕೆರೆಗೆ ಬಿದ್ದು ವೈದ್ಯೆ ಮೃತ್ಯು ಪ್ರಕರಣ; ನಿರ್ಲಕ್ಷ್ಯ ಆರೋಪದ ಮೇಲೆ ಫಾರ್ಮ್ ಹೌಸ್ ಮಾಲಕರ ವಿರುದ್ಧ ಪ್ರಕರಣ ದಾಖಲು
Thursday, November 25, 2021
ಬಂಟ್ವಾಳ: ಕೃಷಿ ಅಧ್ಯಯನಕ್ಕೆಂದು ಬಂದಿದ್ದ ಯುವ ವೈದ್ಯೆಯೋರ್ವಳು ಕೆರೆಗೆ ಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಗೆ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವ ಆರೋಪದ ಮೇಲೆ ಫಾರ್ಮ್ನ ಮಾಲಕರ ಮೇಲೆಯೇ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ವೈದ್ಯೆಯಾಗಿದ್ದ ಮೈಝಿ ಕರೋಲ್ ಫರ್ನಾಂಡೀಸ್ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ವಾರಣಾಸಿ ಫಾರ್ಮ್ ಹೌಸ್ ಗೆ ಕೃಷಿ ಅಧ್ಯಯಕ್ಕೆಂದು ಆಗಮಿಸಿದ್ದರು. ಅಲ್ಲಿ ಅವರು ಸೆ.12 ರಂದು ಕೆರೆಗೆ ಬಿದ್ದು ಮೃತಪಟ್ಟಿದ್ದರು. ಪ್ರಕರಣದಲ್ಲಿ ಈ ಮುನ್ನ ಈಜು ತರಬೇತುದಾರರ ನಿರ್ಲಕ್ಷ್ಯ ಎಂದು ದೂರು ದಾಖಲಾಗಿತ್ತು.
ಇದೀಗ ವಾರಣಾಸಿ ಫಾರ್ಮ್ಹೌಸ್ ನ ಪಾರ್ಥ ವಾರಣಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆರೆಗೆ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದೇ ಮೈಝಿ ಕರೋಲ್ ಫರ್ನಾಂಡೀಸ್ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ಪಾರ್ಥ ವಾರಣಾಸಿ ವಿರುದ್ಧ ಪ್ರಕರಣ ದಾಖಲಾಗಿದೆ.