ಬೆಂಗಳೂರು: ಹಲವಾರು ಮಹಿಳೆಯರನ್ನು ಯಾಮಾರಿಸಿ, ಬ್ಲಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ರಾಮನಗರ ಮಕ್ಕಳ ಆಯೋಗದ ಸಮಿತಿ ಸದಸ್ಯ ಚಂದ್ರೇಗೌಡನನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತನ ಬಗ್ಗೆ ಹಲವಾರು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ.
ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಯು ಮೊದಲಿಗೆ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಬಗ್ಗೆ ನಕಲಿ ಪರಿಚಯ ನೀಡಿ ನಂಬಿಸುತ್ತಿದ್ದ. ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂಬಂತೆ ನಕಲಿ ಗುರುತಿನ ಚೀಟಿಗಳನ್ನು ಬಳಸಿ ಭೀತಿ ಹುಟ್ಟಿಸಿ, ಬಳಿಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಅವರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವೀಡಿಯೋ ಮಾಡಿ, ಅದನ್ನೇ ಬ್ಲಾಕ್ಮೇಲ್ಗೆ ಬಳಸುತ್ತಿದ್ದನೆಂಬ ಆರೋಪ ಕೇಳಿಬಂದಿದೆ.
ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭ 20ಕ್ಕೂ ಅಧಿಕ ಮಹಿಳೆಯರ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿದ್ದು, ಪ್ರಕರಣದ ಗಂಭೀರತೆ ಹೆಚ್ಚಿಸಿದೆ. ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ, ಆಕೆಯೊಂದಿಗೆ ಸಂಬಂಧ ಬೆಳೆಸಿ ಬಳಿಕ ಹಣ ವಸೂಲಿ ಮಾಡಿದ್ದಾನೆ ಎಂದು ದೂರಲಾಗಿದೆ. ಒಂದೇ ಪ್ರಕರಣದಲ್ಲಿ ಸುಮಾರು 5 ಲಕ್ಷ ರೂ. ಹಣ ಪಡೆದಿರುವುದಾಗಿ ತಿಳಿದುಬಂದಿದೆ.
ಇನ್ನು ಮದುವೆಯ ನಾಟಕವನ್ನೂ ಆಡಿದ್ದ ಆರೋಪಿ, ಸಂತ್ರಸ್ತೆಗೆ ಅರಿಶಿಣದ ಕೊಂಬು ಕಟ್ಟುವ ಮೂಲಕ ವಿವಾಹವಾಗಿದ್ದೇನೆಂದು ನಂಬಿಸಿದ್ದ. ಆಕೆಯ ಆಧಾರ್ ಕಾರ್ಡ್ ಪಡೆದು, ತಾನೇ ಪತಿಯೆಂದು ತೋರಿಸಿ ಮನೆ ಬಾಡಿಗೆ ಒಪ್ಪಂದ ಕೂಡ ಮಾಡಿಸಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆಯ ಪುತ್ರಿಯ ದಾಖಲೆಗಳನ್ನೂ ಬದಲಾಯಿಸಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಸಂತ್ರಸ್ತೆ ಆರೋಪಿ ಮೊಬೈಲ್ ಪರಿಶೀಲನೆ ಮಾಡಿದಾಗ ಈ ದಂಧೆ ಬಯಲಾಗಿದ್ದು, ಬಳಿಕ ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.