ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರ ವಿರುದ್ಧ ಎಫ್ಐಆರ್‌

ಕಲಬುರಗಿ: ಇಲ್ಲಿನ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು, ಭದ್ರತಾ ಅಧಿಕಾರಿ ವಿರುದ್ಧ ನರೋಣಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಲು  ಬಂದಿದ್ದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಂದಪ್ಪ ಪರಮಣ್ಣ (30) ಅವರನ್ನು ಮುಖ್ಯ ದ್ವಾರದಲ್ಲೇ ತಡೆದು ಅವರ ಜಾತಿಯನ್ನು ನಿಂದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎಫ್ಐಆರ್‌ ದಾಖಲಾಗಿದೆ.

ನಂದಪ್ಪ ಪರಮಣ್ಣರಿಗೆ ವಿಭಾಗದ ವತಿಯಿಂದ ಗುರುವಾರ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು. ಅದಕ್ಕಾಗಿ ವಿ.ವಿ.ಗೆ ಬಂದಾಗ ಅವರನ್ನು ಮುಖ್ಯ ದ್ವಾರದಲ್ಲಿಯೇ ತಡೆಯಲಾಯಿತು. ಏಕೆ ಎಂದು ಕೇಳಿದಾಗ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ಅವರ ನಿರ್ದೇಶನದ ಮೇರೆಗೆ ಒಳಗೆ ಬಿಡುತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದರು‌. ಈ ಬಗ್ಗೆ ದೂರು ನೀಡಿರುವ ಅವರು 'ಹಿಂದೆಯೂ ತಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕಾಗಿ ಕಿರುಕುಳವನ್ನು ನೀಡಿದ್ದಾರೆ' ಎಂದಿದ್ದಾರೆ.