ಪ್ರೇಯಸಿಗೆ ಮತ್ತೊಬ್ಬನೊಂದಿಗೆ ವಿವಾಹ - ತಾಳಿ ಕಟ್ಟುವ ವೇಳೆ ಎಂಟ್ರಿ ಕೊಟ್ಟು ಕರಿಮಣಿ ಮಾಲಕ ತಾನೇ ಎಂದ ಪ್ರಿಯಕರ


ಹಾಸನ: ತಾಳಿ ಕಟ್ಟುವ ಹೊತ್ತಿಗೆ ಪ್ರೇಯಸಿಯ ವಿವಾಹಕ್ಕೆ ಮಾಜಿ ಪ್ರಿಯಕರ ಪ್ರವೇಶಿಸಿದ ಪರಿಣಾಮ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.

ಗುರುವಾರ ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ  ಬೇಲೂರು ಮೂಲದ ಯುವತಿ ಹಾಗೂ ಶಿವಮೊಗ್ಗ ಮೂಲದ ಯುವಕನ ಮದುವೆ ಮದುವೆ ನಡೆಯುತ್ತಿತ್ತು. ಈ ಮದುವೆ ಛತ್ರಕ್ಕೆ ಯುವತಿಯ ಮಾಜಿ ಪ್ರಿಯಕರ  ಹಾಸನ ಹೊರವಲಯದ ಗವೇನಹಳ್ಳಿಯ ನವೀನ್ ಎಂಬಾತ ಎಂಟ್ರಿ ನೀಡಿದ್ದಾನೆ. 

ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್ ಮದುವೆಗೆ ಅಡ್ಡಿ ಪಡಿಸಿದ್ದಾನೆ. ತಾಳಿ ಕಿತ್ತುಕೊಂಡು ಯುವತಿ ತನ್ನನ್ನು ಪ್ರೀತಿಸುತ್ತಿದ್ದಾಳೆ. ತನ್ನೊಂದಿಗೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರೀತಿ ವಿಚಾರ ತಿಳಿದು ಮದುಮಗ ಪ್ರಮೋದ್ ಕುಮಾರ್ ಮದುವೆ ಬೇಡ ಎಂದು ಕಲ್ಯಾಣ ಮಂಟಪದಿಂದ ಹೊರಟು ಹೋಗಿದ್ದಾನೆ.

ವಿಚಾರ ತಿಳಿದು ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿ ತನ್ನನ್ನ ಪ್ರೀತಿಸುತ್ತಿದ್ದಾಳೆ. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu