ಸುದ್ದಿಗೋಷ್ಠಿಯಲ್ಲಿ ಯಾರು ಮೊದಲು ಮಾತನಾಡಬೇಕೆಂಬ ವಿಚಾರದಲ್ಲಿ ಕೇರಳದ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ: ವೀಡಿಯೋ ವೈರಲ್

ಕೊಚ್ಚಿ: ಸುದ್ದಿಗೋಷ್ಠಿಯಲ್ಲಿ ಯಾರು ಮೊದಲು ಮಾತನಾಡಬೇಕೆಂಬ ಪುಟ್ಟ ವಿಚಾರದಲ್ಲಿ ಕೇರಳದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರ ನಡುವಿನ ವಾಗ್ವಾದದ ವೀಡಿಯೊ, ಇದೀಗ ವೈರಲ್ ಆಗಿದೆ. ಇದು ಕೇರಳದ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಗಳ ನಡುವಿನ ಆಂತರಿಕ ಕಲಹವನ್ನು ಬಹಿರಂಗಪಡಿಸಿದೆ.

ಸೆಪ್ಟೆಂಬರ್ 8ರಂದು ಕೊಟ್ಟಾಯಂ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಚಾಂಡಿ ಉಮ್ಮನ್ ಪುತ್ತುಪಲ್ಲಿ ಉಪಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆದ್ದಿದ್ದರು. ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಕೆ. ಸುಧಾಕರನ್ ನಡುವಿನ ವಾಗ್ವಾದದ ವೀಡಿಯೊ ವೈರಲ್ ಆಗಿದೆ.

ಸುದ್ದಿಗೋಷ್ಠಿಗೆ ಕುಳಿತಾಗ ಸತೀಶನ್ ಮೈಕ್ ಅನ್ನು ತನ್ನತ್ತ ತಿರುಗಿಸಿದರು. ತಕ್ಷಣ ಸುಧಾಕರನ್ ಬಂದು ತಾನು ಮೊದಲು ಮಾತನಾಡುತ್ತೇನೆಂದು ಹೇಳುವುದು ವೀಡಿಯೊದಲ್ಲಿ ಕಂಡುಬಂದಿದೆ. ಈ ವೇಳೆ ಯಾರು ಮೊದಲಿಗೆ ಸುದ್ದಿಗೋಷ್ಠಿ ಆರಂಭಿಸುವುದು ಎಂಬ ಕುರಿತಾಗಿ ಇಬ್ಬರು ನಾಯಕರು ವಾಗ್ವಾದ ನಡೆಸುತ್ತಾರೆ.

ನಾನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ. ಆದ್ದರಿಂದ ತಾನೇ ಸುದ್ದಿಗೋಷ್ಟಿ ಮಾಡಿದರೆ ನ್ಯಾಯಯುತ ಎಂದು ಸುಧಾಕರನ್ ಹೇಳುತ್ತಾರೆ. ಸತೀಶನ್ ಅಂತಿಮವಾಗಿ ಮೈಕ್ರೋಫೋನ್ ಅನ್ನು ಸುಧಾಕರನ್ ಕಡೆಗೆ ವರ್ಗಾಯಿಸುತ್ತಾರೆ. ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಲು ಆರಂಭಿಸುತ್ತಾರೆ. ಆದರೆ ತಮ್ಮ ಮುಂದಿದ್ದ ಮೈಕ್ ಗಳು ಅದಾಗಲೇ ಸ್ವಿಚ್ ಆನ್ ಆಗಿರುವುದು ಉಭಯ ನಾಯಕರಿಗೆ ತಿಳಿದಿರಲಿಲ್ಲ.

ಸುದ್ದಿಗೋಷ್ಟಿಯ ಸತೀಶನ್ ಯಾವುದೇ ಹೇಳೆಕೆ ನೀಡದೆ, "ಅಧ್ಯಕ್ಷರು ಈಗಾಗಲೇ ಅಗತ್ಯವಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ' ಎಂದು ಹೇಳುವ ಮೂಲಕ ಹೆಚ್ಚಿನ ಪ್ರಶ್ನೆಗಳನ್ನು ತಳ್ಳಿಹಾಕಿದ್ದರು. ಈ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅನೇಕರು ವಿರೋಧ ಪಕ್ಷದ ನಾಯಕರು ಅಹಂಕಾರದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ. ಸತೀಶನ್ ಸುದ್ದಿಗೋಷ್ಠಿಯಲ್ಲಿ ತಮ್ಮ ಮತ್ತು ಸುಧಾಕರನ್ ನಡುವೆ ನಿಜವಾಗಿಯೂ ವಾಗ್ವಾದ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಮಾಧ್ಯಮಗಳು ಅದನ್ನು ಬೇರೆ ರೀತಿ ಬಿಂಬಿಸುತ್ತಿವೆ ಎಂದರು. ಈ ಘಟನೆ ಬಗ್ಗೆ ಸುಧಾಕರನ್ ಇನ್ನೂ ಪ್ರತಿಕ್ರಿಯಿಸಿಲ್ಲ.
BREAKING NEWS
Loading latest news...
Join our WhatsApp Channel Powered By : Online Pudu