ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಉಗ್ರನಿಗೆ ತಿಳಿಸಿಕೊಡುತ್ತಿದ್ದ ಜಮ್ಮು ಕಾಶ್ಮೀರದ ಡೆಪ್ಯುಟಿ ಎಸ್ಪಿ ಅರೆಸ್ಟ್

ನವದೆಹಲಿ: ಉ್ರಗರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಉಪ ಪೊಲೀಸ್​ ಆಯುಕ್ತ ಶೇಖ್​ ಆದಿಲ್​ ಮುಸ್ತಾಕ್​ ಎಂಬಾತನನ್ನು ಬಂಧಿಸಲಾಗಿದೆ. 

ಈತ ಬಂಧನದಿಂದ ತಪ್ಪಿಸಿಕೊಳ್ಳಲು ಉಗ್ರನಿಗೆ ಸಹಾಯ ಮಾಡಿರುವ ಹಾಗೂ ಉಗ್ರನ ವಿರುದ್ಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯನ್ನೇ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈತ ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶೇಖ್​ ಆದಿಲ್​ ಮುಸ್ತಾಕ್​ ಭಾಗಿಯಾಗಿದ್ದಾನೆ. ಸದ್ಯ ಅಧಿಕಾರಿಯನ್ನು ಶ್ರೀನಗರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಜುಲೈನಲ್ಲಿ ಬಂಧನಕ್ಕೆ ಒಳಗಾದ ಉಗ್ರನ ಮೊಬೈಲ್​ ಫೋನ್ ಅನ್ನು ಪರಿಶೀಲನೆ ನಡೆಸಲಾಗಿತ್ತು. ಆಗ ಆತ ಆದಿಲ್ ಮುಷ್ತಾಕ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ. ಈ ಅಧಿಕಾರಿ, ಉಗ್ರನಿಗೆ ಕಾನೂನಿನ ಕಣ್ಣಿನಿಂದ ಯಾವ ರೀತಿ ತಪ್ಪಿಸುವುದು ಎಂದು  ಮಾರ್ಗದರ್ಶನ ನೀಡುತ್ತಿದ್ದ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆದಿಲ್ ಮುಷ್ತಾಕ್ ಟೆಲಿಗ್ರಾಂ ಆ್ಯಪ್‌ನಲ್ಲಿ ಆರೋಪಿಯೊಂದಿಗೆ ಮಾತನಾಡುತ್ತಿದ್ದನು.

ಉಗ್ರ ಮತ್ತು ಉಪ ಅಧೀಕ್ಷಕ ಆದಿಲ್ ಮುಷ್ತಾಕ್ ನಡುವೆ ಕನಿಷ್ಠ 40 ಕರೆಗಳಿವೆ. ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ತನಿಖಾ ಅಧಿಕಾರಿಯನ್ನು ಸಿಲುಕಿಸಲು ಉಗ್ರನ ಪರವಾಗಿ ಬಂಧಿತ ಅಧಿಕಾರಿ ಸುಳ್ಳು ದೂರನ್ನು ರಚಿಸಿದ್ದನು. ಉಗ್ರನಿಂದ ಆದಿಲ್ ಮುಷ್ತಾಕ್ 5 ಲಕ್ಷ ರೂ. ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಹಣಕಾಸು ನಿರ್ವಹಣೆಗಾಗಿ ಸೋಪೋರ್‌ನಲ್ಲಿ ನಕಲಿ ದಾಖಲೆಗಳ ಮೇಲೆ ಬ್ಯಾಂಕ್ ಖಾತೆ ತೆರೆದಿದ್ದ. ಮುಝಾಮಿಲ್ ಜಹೂರ್‌ನೊಂದಿಗೆ ಅಧಿಕಾರಿ ನಿಕಟ ಸಂಪರ್ಕದಲ್ಲಿದ್ದನೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.