ಅಂಜುಶ್ರೀ ಪಾರ್ವತಿ ಸಾವಿಗೆ ವಿಷಾಹಾರ ಕಾರಣವಲ್ಲ: ವಿದ್ಯಾರ್ಥಿನಿ ಸಾವಿಗೆ ರೋಚಕ ತಿರುವು


ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ (19) ಸಾವಿಗೆ ರೋಚಕ ತಿರುವು ದೊರಕಿದೆ. ಆಕೆಯ ಸಾವಿಗೆ ವಿಷಾಹಾರ ಕಾರಣವಲ್ಲ, ಬದಲಾಗಿ ವಿಷ ಪದಾರ್ಥದ ಸೇವನೆಯೇ ಕಾರಣವೆಂಬ ವಿಚಾರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಹೇಳಿದೆ. ಆಕೆಯ ಕರುಳು ನಿಷ್ಕ್ರಿಯವಾಗಿತ್ತು ಹಾಗೂ ಹಳದಿ ಜ್ವರ ಬಾಧಿಸಿತ್ತು ಎಂದು ವರದಿಯಲ್ಲಿ ತಿಳಿಸಿದೆ. ಆದ್ದರಿಂದ ಹೆಚ್ಚಿನ ತನಿಖೆಗಾಗಿ ಅವರ ಆಂತರಿಕ ಅವಯವಗಳನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಲಾಗಿದೆ.

ಅಂಜುಶ್ರೀ ಪಾರ್ವತಿಯ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಆದರೆ ಅದು ಆಹಾರದಲ್ಲಿನ ವಿಷ ಅಲ್ಲವೆಂದು ಫಾರೆನ್ಸಿಕ್‌ ಸರ್ಜನ್‌ ಅವರ ಅಭಿಪ್ರಾಯವಾಗಿದೆ. ವಿಷ ಕರುಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ವರದಿಯಲ್ಲಿ ಹೇಳಿದೆ.

ಡಿ.31ರಂದು ಅಂಜುಶ್ರೀ ಸ್ಥಳೀಯ ರೆಸ್ಟೋರೆಂಟ್‌ ನಿಂದ ಕುಝಿಮಂತಿ ಬಿರಿಯಾನಿ( ಕೇರಳದಲ್ಲಿ ಜನಪ್ರಿಯ ಬಿರಿಯಾನಿ)ಯನ್ನು ಆನ್ಲೈನ್‌ ಮೂಲಕ ಆರ್ಡರ್ ಮಾಡಿ ಸೇವಿಸಿದ್ದರು. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಮುಂಜಾನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತಳ ಪೋಷಕರು ದೂರು ನೀಡಿದ್ದಾರೆ. ಫುಡ್‌ ಪಾಯಿಸನ್‌ ನಿಂದ ಆಕೆ ಮೃತಪಟ್ಟಿದ್ದಾರೆಂದು ಆಗಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಟೇಲ್‌ ಮಾಲಕ ಸಹಿತ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu