ಆಳ್ವಾಸ್ ಕಾಲೇಜಿನಲ್ಲಿ ‘ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ’ - ಮಾನಸಿಕ ಆರೋಗ್ಯಕ್ಕೆ ‘ಮಾತು’ ರಹದಾರಿ: ವಿವೇಕ್ ಆಳ್ವ


 

ವಿದ್ಯಾಗಿರಿ (ಮೂಡುಬಿದಿರೆ): 

‘ನಿರಂತರ ಮೌನವು ಮನುಷ್ಯನನ್ನು ಮಾನಸಿಕ ಅಸ್ವಸ್ಥತೆಗೆ ಕೊಂಡೊಯ್ಯುತ್ತದೆ. ಅದು ವ್ಯಕ್ತಿಯನ್ನು ಆಂತರಿಕವಾಗಿ ಕೊಲ್ಲುತ್ತದೆ. ಇಂತಹ ಸಂದಿಗ್ಧ ಅಸ್ವಸ್ಥತೆಯಿಂದ ಹೊರಬರಲು ‘ಮಾತು’ ಪರಿಹಾg’À ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ಶುಕ್ರವಾರ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ನ್ಯೂನತೆಯನ್ನು ನಿಂದಿಸುವ ಮನೋಭಾವ ಸಲ್ಲದು. ನೊಂದವರಿಗೆ ಸ್ಪಂದಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು ಎಂದರು. 





ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಒಂದು ಚಿಕ್ಕ ಸಹಕಾರವು ದೊಡ್ಡ ಪರಿಣಾಮವನ್ನು ಬೀರುತ್ತದೆ, ಮಾನಸಿಕವಾಗಿ ಕುಗ್ಗಿ ಹೋದವರಿಗೆ ನಿಮ್ಮಿಂದ ಆದಷ್ಟು ಸಹಕರಿಸಬೇಕು ಎಂದರು. 

ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಒಂದು ಸಮಸ್ಯೆ ಹೆಮ್ಮರವಾಗಿ ಬೆಳೆಯುವುದರಿಂದ ಮಾನಸಿಕ  ಸ್ಥೈರ್ಯ ಕುಗ್ಗುತ್ತದೆ. ಅವರಿಗೆ ಧೈರ್ಯ ತುಂಬಿದಾಗ ಅತ್ಮಹತ್ಯೆಯನ್ನು ತಡೆಯಲು ಸಾಧ್ಯ. ಯಾವುದೇ ಸಮಸ್ಯೆ ಶಾಶ್ವತವಲ್ಲ. ಅದು ಆ ಕ್ಷಣ ಅಥವಾ ಸಂದರ್ಭಕ್ಕೆ ಮಾತ್ರ ಸೀಮಿತ ಎಂದು ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮನೋಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್ ಭಟ್ ಪಿ. ಹೇಳಿದರು.   

ಯುವಜನತೆಯಲ್ಲಿ ಆತ್ಮಹತ್ಯೆ ತಡೆ ಕುರಿತು ಕಾರ್ಯಾಗಾರ ನಡೆಯಿತು.

ಎನ್.ಐ.ಪಿ.ಎಂ ಕಾರ್ಯಕಾರಿ ಸಮಿತಿಯ ಸದಸ್ಯ ರೊನಾಲ್ಡ್ ಮಸ್ಕರೇನಸ್, ಖಜಾಂಚಿ ಸಂತೋಷ ಪೈ, ಮಂಗಳೂರಿನ ‘ಮನಶಾಂತಿ’ಯ   ಮಾನಸಿಕ ಆರೋಗ್ಯ ತಜ್ಞೆ ರಮೀಳಾ ಶೇಖರ್ , ಸುನಿತಾ ವಿಠ್ಠಲ್ ಇದ್ದರು. ಸುಧೀಕ್ಷಾ ನಿರೂಪಿಸಿದರು. ವಿದ್ಯಾರ್ಥಿನಿ ಸಂಧ್ಯಾ ವಂದಿಸಿದರು.