ಮೂಡುಬಿದಿರೆ: ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮರಳುತ್ತಿದ್ದ ಯುವಕನೋರ್ವನು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮೂಡುಬಿದಿರೆ ತಾಲೂಕಿನ ಕಾಂತವಾರ ಕ್ರಾಸ್ ಬಳಿ ರವಿವಾರ ತಡರಾತ್ರಿ ನಡೆದಿದೆ.
ಮೂಲತ ಚಿಕ್ಕಮಗಳೂರು ಜಿಲ್ಲೆಯ ನಿವಾಸಿ, ಪ್ರಸ್ತುತ ಮೂಡಬಿದಿರೆಯ ಮಹಾವೀರ ಕಾಲೇಜು ಬಳಿಯ ರಾಣಿಕೇರಿಯಲ್ಲಿ ವಾಸವಿದ್ದ ರಾಜೇಶ್ (28) ಮೃತಪಟ್ಟ ದುರ್ದೈವಿ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ರಾಜೇಶ್ ಅವರ ಅಜ್ಜಿ ರವಿವಾರ ಬೆಳಗ್ಗೆ ನಿಧನರಾಗಿದ್ದರು. ಆದ್ದರಿಂದ ರಾಜೇಶ್ ಬಾಳೆಹೊನ್ನೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಅಂತ್ಯ ಸಂಸ್ಕಾರ ಮುಗಿಸಿ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಅವರ ದ್ವಿಚಕ್ರ ವಾಹನ ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಾಜೇಶ್ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ರಾಜೇಶ್ ಪತ್ನಿ ಹಾಗೂ 5 ತಿಂಗಳ ಶಿಶುವನ್ನು ಅಗಲಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.