-->

Yatnal Vs BSY- ರಣಕಹಳೆ ಊದಿದ ಯತ್ನಾಳ್- "ಸಿಎಂ ಹಗರಣಗಳು ಬಯಲಾದರೆ ಎಲ್ಲ ಮಠಾಧೀಶರು ಮಠ ಬಿಟ್ಟು ಓಡಿ ಹೋತೋದು ಖಚಿತ"

Yatnal Vs BSY- ರಣಕಹಳೆ ಊದಿದ ಯತ್ನಾಳ್- "ಸಿಎಂ ಹಗರಣಗಳು ಬಯಲಾದರೆ ಎಲ್ಲ ಮಠಾಧೀಶರು ಮಠ ಬಿಟ್ಟು ಓಡಿ ಹೋತೋದು ಖಚಿತ"

ಮೈಸೂರು: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಮತ್ತೆ ಸಿಎಂ ಯಡಿಯೂರಪ್ಪ ಮಾತ್ರವಲ್ಲದೇ ಅವರಿಗೆ ಬೆಂಬಲವಾಗಿ ನಿಂತಿರುವ ಮಠಾಧೀಶರ ವಿರುದ್ಧವೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.






ಮೈಸೂರು ಪ್ರವಾಸದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳ ಪರವಾಗಿ ಮಾತನಾಡುವ ಮಠಾಧೀಶರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು, ಮುಖ್ಯಮಂತ್ರಿಗಳ ಹಗರಣಗಳು ಒಂದೊಂದೇ ಹೊರಗೆ ಬಂದಾಗ ಈ ಮಠಾಧೀಶರುಗಳೆಲ್ಲ ಮಠ ಬಿಟ್ಟು ಓಡಿ ಹೋಗಬೇಕಾಗುತ್ತದೆ, ನಾವು ಈಗ ಸುಮ್ಮನೆ ಕುಳಿತಿದ್ದೇವೆ.  ಕೊನೆಗೊಂದು ದಿನ ಬ್ರಹ್ಮಾಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.



ಇನ್ನು, ನನ್ನ ಹಾಗೂ ಯಡಿಯೂರಪ್ಪ ನಡುವಿನ ಹೋರಾಟ ಮಹಾಭಾರತದ ಹಾಗೆ ಇದೆ ಎಂದು ಹೋಲಿಸಿದ ಅವರು, ಸಿಎಂ ಬಿಎಸ್ ವೈ ಚಕ್ರವ್ಯೂಹ ವಿರುದ್ಧ ಹೋರಾಡಿ ನಾನು ಅರ್ಜುನನಾಗಿ ಗೆಲ್ಲುತ್ತೇನೆ. ನಾನು ಅಭಿಮನ್ಯುನೂ ಆಗಬಹುದು, ಅರ್ಜುನನೂ ಆಗಬಹುದು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.





ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಗೌರವಯುತವಾಗಿ ಅವರು ನಿವೃತ್ತಿ ತೆಗೆದು ಕೊಳ್ಳಬೇಕು, ಮುಖ್ಯಮಂತ್ರಿಯಾಗಿ ಮಾಡಬೇಕಾಗಿದ್ದ ಆಡಳಿತವನ್ನು ಅವರ ಪುತ್ರ ವಿಜಯೇಂದ್ರ ನಡೆಸುತ್ತಿದ್ದಾನೆ. ಮುಖ್ಯಮಂತ್ರಿಗಳಿಗೆ ನೂರಾರು ಕಡತಗಳಿಗೆ ಸಹಿ ಮಾಡುವ ಶಕ್ತಿ ಕೂಡ ಇಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಅಧಿಕಾರವೇಕೆ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯವರು ಸ್ವಯಂ ನಿವೃತ್ತಿ ಪಡೆಯಬೇಕು ಎಂದು ಅವರು ಹೇಳಿದರು.





ನಿಮ್ಮದು ಅರಣ್ಯ ರೋಧನ ಎಂದು ಎನಿಸುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೋರಾಟ, ಸಂಘರ್ಷಗಳಲ್ಲಿ ಅರಣ್ಯರೋಧನ ಇದ್ದೇ ಇರುತ್ತದೆ. ಸತ್ಯಕ್ಕೆ ಬೆಲೆ ಇದ್ದೇ ಇದೆ. ಮಹಾಭಾರತದಲ್ಲಿ ಪಾಂಡು ಪುತ್ರರಿಗೆ ವನವಾಸ ಹೋಗಿ ಬಂದ ಮೇಲೆ ವಿಜಯಮಾಲೆ ಪ್ರಾಪ್ತಿಯಾಯಿತು. 


ಹಾಗೆಯೇ ಅರಣ್ಯವಾಸ ಮುಗಿಸಿ ನಾವು ಅಜ್ಞಾತವಾಸದಲ್ಲಿದ್ದೇವೆ. ಇದೂ ಮುಗಿಯುತ್ತಾ ಬಂದಿದೆ. ಈಗಲೂ ಹೋರಾಟ ಮುಂದುವರಿಯುತ್ತಿದೆ. ಇನ್ನು ಪಟ್ಟಾಭಿಷೇಕ ಮಾಡುವ ಕಾಲ ಬಂದಿದೆ. ಒಂದಲ್ಲ ಒಂದು ದಿನ ವಿಜಯ ನಮ್ಮದೆ ಎಂದು ಸೂಚ್ಯವಾಗಿ ನುಡಿದರು.

Ads on article

Advertise in articles 1

advertising articles 2

Advertise under the article