ಚೆನ್ನೈ: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದುಡಿಯುತ್ತಿರುವ ಪೊಲೀಸರಿಗೆ ತಮಿಳುನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.
ಕೊರೋನಾ ವೈರಸ್ ನಿಂದ ತೀವ್ರ ತರಹದ ಪ್ರಾಣ ಹಾನಿ ಸಂಭವಿಸಿದರೂ, ದೃತಿಗೆಡದೇ ಪೊಲೀಸರು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರಿಗೆ ಪ್ರೋತ್ಸಾಹ ಧನವಾಗಿ ತಮಿಳುನಾಡು ಸರ್ಕಾರ 5 ಸಾವಿರ ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಇದೇ ವೇಳೆ, ಸಾರ್ವಜನಿಕರ ರಕ್ಷಣೆಗಾಗಿ ದುಡಿಯುತ್ತಿರುವ ಪೊಲೀಸರ ಆರೋಗ್ಯದ ದೃಷ್ಟಿಯಿಂದ ಬಹುತೇಕ ಪೊಲೀಸ್ ಸಿಬ್ಬಂದಿಗೆ ಕೊವಿಡ್ ಲಸಿಕೆಯನ್ನೂ ವಿತರಿಸಲಾಗಿದೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ಭದ್ರತೆ ನೀಡುತ್ತಿರುವ ಪೊಲೀಸರಿಗೆ ಸರ್ಕಾರದ ಭದ್ರತೆ ಕೂಡ ಅಗತ್ಯವಾಗಿದೆ.
ಇತ್ತ, ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ವಿವಿಧ ವರ್ಗದವರಿಗೆ ಪ್ಯಾಕೇಜ್ ಘೋಷಿಸಿದ್ದಾರೆ. ರಾಜ್ಯದಲ್ಲಿ ಕೂಡ ಪೊಲೀಸರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕಾದ ಅಗತ್ಯ ಇದೆ. ತಮ್ಮ ಕುಟುಂಬವನ್ನು ಬಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾಗುತ್ತಿರುವ ಪೊಲೀಸರಿಗೆ ಸರ್ಕಾರ ಕೊರೋನಾ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಿನ ಭದ್ರತೆ ನೀಡಬೇಕಿದೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ.

