ಉಳ್ಳಾಲ: ಸೆಮಿನಾರ್ ತಪ್ಪಿಸಲು ಕಾಲೇಜಿಗೆ ಬಾಂಬ್ ಬೆದರಿಕೆ ಕರೆ- ದೂರು ಕೊಟ್ಟ ವಿದ್ಯಾರ್ಥಿನಿಯೇ ಅರೆಸ್ಟ್
Saturday, June 7, 2025
ಉಳ್ಳಾಲ: ನಾಟೆಕಲ್ನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಬಾಂಬ್ ಇಡಲಾಗುತ್ತದೆ ಎಂದು ಬೆದರಿಕೆ ಕರೆಯ ಬೆನ್ನು ಬಿದ್ದ ತನಿಖೆ ಪೊಲೀಸರು ಅದೇ ಕಾಲೇಜಿನ ದೂರು ಕೊಟ್ಟಿರುವ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನೇ ಬಂಧಿಸಿದ್ದಾರೆ.
ಕಣಚೂರು ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಬಂಧಿತ ವಿದ್ಯಾರ್ಥಿನಿ.
ಜೂನ್ 4ರಂದು ಬೆಳಗ್ಗೆ 8.45ರ ಸುಮಾರಿಗೆ ನಾಟೆಕಲ್ನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಕರೆ ಬಂದಿತ್ತು. ಕರೆ ಮಾಡಿದವರು ಅದೇ ದಿನ ಬೆಳಗ್ಗೆ 11 ಗಂಟೆಯೊಳಗೆ ಕಾಲೇಜು ಖಾಲಿ ಮಾಡಿ ಇಲ್ಲವಾದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಸುಮಾರು ಐದು ಬಾರಿ ಬೆದರಿಕೆ ಒಡ್ಡಿದ್ಸರು ಎನ್ನಲಾಗಿದೆ. ಈ ಕುರಿತು ಕಾಲೇಜಿನ ಪಿ.ಜಿ. ವಿದ್ಯಾರ್ಥಿನಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಆಸ್ಪತ್ರೆಯ ಆಡಳಿತಾಧಿಕಾರಿಗಳು ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.
ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ತಂಡ ಸೇರಿ ಕಾಲೇಜಿಗೆ ಧಾವಿಸಿ ಇಡೀ ಆಸ್ಪತ್ರೆಯ ಪ್ರದೇಶವನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲೂ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಘಟನೆಯಿಂದ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಆತಂಕಕ್ಕೆ ಒಳಗಾಗಿದ್ದರು. ಕೊನೆಗೆ ಪರಿಶೀಲನೆ ನಡೆಸಿದ ಪೊಲೀಸರು ಇದೊಂದು ಹುಸಿ ಬಾಂಬ್ ಕರೆ ಎಂದು ಸಮಾಧಾನ ಪಡಿಸಿ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಫೋನ್ ಕರೆ ಸ್ವೀಕರಿಸಿದಾಕೆಯೇ ಆರೋಪಿ:
ತನಿಖೆ ನಡೆಸಿದ ವಿಶೇಷ ತಂಡಕ್ಕೆ ಯಾವುದೇ ಸುಳಿವು ದೊರಕದೇ ಇದ್ದಾಗ ಆಸ್ಪತ್ರೆಯಲ್ಲಿ ಫೋನ್ ಕರೆಯನ್ನು ಸ್ವೀಕರಿಸಿದಾಕೆಯನ್ನು ವಿಚಾರಣೆ ನಡೆಸಿದ್ದಾರೆ. ಮೊದಲು ಆಕೆ ಪೊಲೀಸರ ದಿಕ್ಕು ತಪ್ಪಿಸಿದ್ದಾಳೆ. ಆದರೆ ಪೊಲೀಸರು ತನಿಖೆ ಚುರುಕುಗೊಂಡಾಗ ಆಕೆ ಕೊನೆಗೆ ತಾನೇ ಕೃತ್ಯ ಎಸಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.
ಪೊಲೀಸ್ ತನಿಖೆಯಲ್ಲಿ ಅದೇ ದಿನ ಕಾಲೇಜಿನಲ್ಲಿ ಸೆಮಿನಾರ್ ನೀಡಬೇಕಿತ್ತು ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಬಾಂಬ್ ಬೆದರಿಕೆಯ ನಾಟಕ ಆಡಿರುವುದಾಗಿ ವಿದ್ಯಾರ್ಥಿನಿ ತಪ್ಪು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದು ಆಕೆಯ ಬಳಿಯಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.