ಕ್ಷೌರದ ಬಳಿಕ ಕುತ್ತಿಗೆ ಮಸಾಜ್‌‌ನಿಂದ ಭಾರೀ ಎಡವಟ್ಟು - ಪಾರ್ಶ್ವವಾಯುವಿಗೆ ತುತ್ತಾದ ಯುವಕ


ಬೆಂಗಳೂರು: ಕ್ಷೌರ ಮಾಡಿಸಿಕೊಂಡ ಯುವಕನೊಬ್ಬ ಕುತ್ತಿಗೆ ಮಸಾಜ್‌ ಮಾಡಿಸಲು ಹೋಗಿ ಪಾರ್ಶ್ವವಾಯುವಿಗೆ ತುತ್ತಾಗಿ ನರಕಯಾತನೆ ಕಂಡು ಹೊರಬಂದಿದ್ದಾನೆ. ಸದ್ಯ ಚಿಕಿತ್ಸೆ ಪಡೆದು, 2ತಿಂಗಳ ವಿಶ್ರಾಂತಿ ಬಳಿಕ ಯುವಕ ಚೇತರಿಸಿಕೊಂಡಿದ್ದಾನೆ‌.


ಬೆಂಗಳೂರಿನಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ ಬಳ್ಳಾರಿ ಮೂಲದ ಯುವಕ ಪಾರ್ಶ್ವವಾಯುವಿಗೆ ತುತ್ತಾದವನು. ಕ್ಷೌರಕ್ಕೆ ತೆರಳಿದ ಯುವಕ ಉಚಿತವಾಗಿ ತಲೆ ಮಸಾಜ್‌ ಮಾಡಿಸಿಕೊಂಡಿದ್ದಾನೆ. ಈ ವೇಳೆ ಕ್ಷೌರಿಕ ಕುತ್ತಿಗೆಯನ್ನು ತಿರುಗಿಸಿದ ಕ್ಷಣ ನೋವುಂಟಾಗಿದೆ. ಆದರೆ, ಸರಿಹೋಗಬಹುದು ಎಂದುಕೊಂಡು ಮನೆಗೆ ವಾಪಸ್ಸಾಗಿದ್ದಾನೆ. ಆದರೆ, ಒಂದು ಗಂಟೆಯಲ್ಲಿಯೇ ಆತನಿಗೆ ಮಾತನಾಡುವ ಹಾಗೂ ದೇಹದ ಎಡಭಾಗ ಸ್ವಾಧೀನ ಕಳೆದುಕೊಂಡ ಅನುಭವ ಉಂಟಾಗಿದೆ.


ಇದರಿಂದ ಆತಂಕಗೊಂಡ ಯುವಕ ಆ್ಯಸ್ಟರ್‌ ಆರ್‌.ವಿ. ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. ಕುತ್ತಿಗೆಯನ್ನು ತಿರುಗಿಸಿದ ಪರಿಣಾಮ ಶೀರ್ಷ ಧಮನಿಯಲ್ಲಿ (ಕುತ್ತಿಗೆ ಭಾಗದ ನರ) ಕಣ್ಣೀರು ತುಂಬಿಕೊಂಡಿರುವುದು ಹಾಗೂ ಮೆದುಳಿನ ಭಾಗಕ್ಕೆ ರಕ್ತ ಸಂಚಾರ ಕಡಿಮೆಯಾಗಿದ್ದರಿಂದ ಪಾರ್ಶ್ವವಾಯುವಿಗೆ ಕಾರಣ ಆಗಿರುವುದನ್ನು ದೃಢಪಡಿಸಿದ್ದಾರೆ.


ಈ ಬಗ್ಗೆ ಆ್ಯಸ್ಟರ್‌ ಆರ್‌.ವಿ ಆಸ್ಪತ್ರೆ ಹಿರಿಯ ನರರೋಗ ತಜ್ಞ ಡಾ.ಶ್ರೀಕಂಠ ಸ್ವಾಮಿ ಮಾಹಿತಿ ನೀಡಿ, ಯುವಕ ಸಾಧಾರಣ ಪಾರ್ಶ್ವವಾಯುವಿಗಿಂತ ಭಿನ್ನವಾದ ಸಮಸ್ಯೆಗೆ ತುತ್ತಾಗಿದ್ದಾನೆ. ಬಲವಂತವಾಗಿ ಕುತ್ತಿಗೆ ತಿರುಚಿದ ಕಾರಣ ಈ ಸಮಸ್ಯೆ ಉಂಟಾಗಿತ್ತು. ರಕ್ತ ತೆಳುವಾಗಿಸುವ ಔಷಧಿಯನ್ನು ನೀಡಿ, ಪಾರ್ಶ್ವವಾಯು ಇನ್ನಷ್ಟು ಹೆಚ್ಚಾಗದಂತೆ ಚಿಕಿತ್ಸೆ ನೀಡಲಾಯಿತು. ಸದ್ಯ ಚೇತರಿಸಿಕೊಂಡಿದ್ದಾನೆ ಎಂದು ಹೇಳಿದರು.


ಬೆನ್ನಿನಿಂದ ಬಂದು ಕುತ್ತಿಗೆ ಮೂಲಕ ಹಾದುಹೋಗುವ ಮೂಳೆ ಮತ್ತು ಅದರ ಸುತ್ತಮುತ್ತಲಿನ ರಚನೆಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಏಕಾಏಕಿ ಕುತ್ತಿಗೆ ತಿರುಗಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗದರ್ಶನ, ತರಬೇತಿ ಇಲ್ಲದೆ ಮಸಾಜ್‌ ಮಾಡಬಾರದು. ಮಸಾಜ್‌ ಮಾಡಿಸಿಕೊಳ್ಳುವವರೂ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu