ಮಂಗಳೂರು: ಶ್ರೀಕ್ಷೇತ್ರ ಕುಡುಪುವಿನಲ್ಲಿ ಕಳೆಗಟ್ಟಿದ ನಾಗರಪಂಚಮಿಯ ಸಂಭ್ರಮ- ನಾಗರಕಲ್ಲಿಗೆ ಹಾಲು, ಸೀಯಾಳದ ಅಭಿಷೇಕ


ಮಂಗಳೂರು: ನಗರದ ಪ್ರಸಿದ್ಧ ಕುಡುಪು ಕ್ಷೇತ್ರದಲ್ಲಿ ಇಂದು  ನಾಗರಪಂಚಮಿ ಹಬ್ಬದ ಸಂಭ್ರಮ ಕಳೆಗಟ್ಟಿತು. ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರದ್ಧಾಭಕ್ತಿಯಿಂದ ಅರ್ಪಿಸಿರುವ ಹಾಲು, ಸೀಯಾಳದಿಂದ ನಾಗನಿಗೆ ತನು ಎರೆಯಲಾಯಿತು.

ತುಳುನಾಡು ಹಿಂದೆ ನಾಗರಖಂಡವೆಂದು ಪ್ರಸಿದ್ಧಿ. ಇಲ್ಲಿನ ಜನರು ನಾಗನನ್ನು ಪ್ರತ್ಯಕ್ಷ ದೈವವೆಂದು ನಂಬಿಕೊಂಡು ನಡೆಯುತ್ತಾರೆ. ಅವೈದಿಕ ತುಳುವರು ನಾಗರಕಲ್ಲುಹಾಕಿ ನಾಗನಿಗೆ ತನು ಎರೆದು ಭಕ್ತಿಯಿಂದ ನಡೆದುಕೊಳ್ಳುವುದನ್ನು ಅನಾದಿ ಕಾಲದಿಂದಲೂ ರೂಢಿಸಿಕೊಂಡು ಬಂದವರು. ಈಗಲೂ ಆ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ನಾಗರಪಂಚಮಿಯು ಪ್ರಮುಖವಾಗಿ ಹೆಂಗಸರ ಹಬ್ಬ. ನಾಗರಪಂಚಮಿಯ ದಿನ ಎಲ್ಲರೂ ಶುದ್ಧಾಚಾರವನ್ನು ಪಾಲಿಸಿ ತಮ್ಮ ಮೂಲ ನಾಗಬನಕ್ಕೆ ಹೋಗಿ ನಾಗನಿಗೆ ತನು ಎರೆಯುತ್ತಾರೆ. ಮೂಲ ನಾಗಬನ ಇಲ್ಲದವರು ಶ್ರೀ ಕುಡುಪು ಕ್ಷೇತ್ರದಲ್ಲಿ ನಾಗನಿಗೆ ಹಾಲೆರೆಯುತ್ತಾರೆ.


ನಾಗರಪಂಚಮಿಯಂದು ನಾಗನ ಕಲ್ಲನ್ನು ಶುದ್ಧ ನೀರಿನಿಂದ ತೊಳೆದು, ಹಾಲು‌ ಸೀಯಾಳದ ಅಭಿಷೇಕ ಮಾಡಲಾಗುತ್ತದೆ. ಕಲ್ಲಿಗೆ ಅರಶಿಣ ಹಚ್ಚಿ, ನಾಗನಿಗೆ ಪ್ರಿಯವಾದ ಕೇದಗೆ, ಸಂಪಿಗೆ,ಅಡಿಕೆ ಹೂವಿನಿಂದ ಅಲಂಕರಿಸಲಾಗುತ್ತದೆ. ಬಳಿಕ ಅರಳು, ಬೆಲ್ಲ, ಬಾಳೆಯಹಣ್ಣಿನ ನಾಗತಂಬಿಲ ಅರ್ಪಿಸಲಾಗುತ್ತದೆ. ಇಲ್ಲಿಗೆ ನಾಗರಪಂಚಮಿಯ ಸಡಗರ ಮುಗಿದಂತೆಯೇ. ನಾಗನಿಗೆ ತನು ಎರೆಯುವುದೆಂದರೆ ತಂಪು ಮಾಡುವುದೆಂದು ಅರ್ಥ. ಇಲ್ಲಿ ನಾಗರಕಲ್ಲಿಗೆ ಅರ್ಪಿಸಿದ ಹಾಲು ಸೀಯಾಳ ಭೂಮಿಯ ಒಡಲು ಸೇರಿ ತಂಪು ಮಾಡುತ್ತದೆ. ಜೊತೆಗೆ ಮಳೆ ನೀರಿನೊಂದಿಗೆ ಹಾಲು - ಸೀಯಾಳವು ಕಡಲು ಸೇರುತ್ತದೆ. ಆದ್ದರಿಂದ ನಾಗರಪಂಚಮಿಯ ಬಳಿಕ ಮೀನುಗಾರಿಕೆ ಮೆಲ್ಲನೇ ಆರಂಭವಾಗುತ್ತದೆ. ಮಳೆಗಾಲದಲ್ಲಿ ತಾತ್ಕಾಲಿಕ ಸ್ಥಗಿತವಾದ ಮೀನುಗಾರಿಕೆ ಮರು ಆರಂಭಕ್ಕೆ ನಾಗರಪಂಚಮಿ ಗಡುವು ಹೌದು.


BREAKING NEWS
Loading latest news...
Join our WhatsApp Channel Powered By : Online Pudu