ಕಾರ್ಕಳ: ನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಸಾವಿನಿಂದ ಖಿನ್ನತೆ ಗೊಳಗಾದ ವ್ಯಕ್ತಿ ನಾಪತ್ತೆ: ಐದು ದಿನಗಳಾದರೂ ವಾಪಸ್ ಆಗಿಲ್ಲ, ಮನೆಮಂದಿಯಲ್ಲಿ ಆತಂಕ

ಉಡುಪಿ: ನಟ ಪುನೀತ್‌ ರಾಜ್‌ಕುಮಾರ್‌ ಅಗಲಿಕೆ ಅವರ ಹಲವಾರು ಅಭಿಮಾನಿಗಳಿಗೆ  ಅರಗಿಸಿಕೊಳ್ಳಲಾಗುತ್ತಿಲ್ಲ. ಕೆಲ ಅಭಿಮಾನಿಗಳು ಹೃದಯಾಘಾತಕ್ಕೆ ತುತ್ತಾಗಿದ್ದರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. 

ಈ ನಡುವೆ ಖಿನ್ನತೆಗೆ ಜಾರುತ್ತಿದವರೂ ಇದ್ದಾರೆ. ಇದೀಗ ಕಾರ್ಕಳದ ವ್ಯಕ್ತಿಯೋರ್ವರು ಪುನೀತ್‌ ಸಾವಿನ ಸುದ್ದಿಯನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದವರು ಆಘಾತಗೊಂಡು, ಏಕಾಏಕಿ ಮನೆಯಿಂದ ನಾಪತ್ತೆಯಾಗಿಬಿಟ್ಟಿದ್ದಾರೆ.

ಕಾರ್ಕಳದ ದಿನೇಶ್(56) ನಾಪತ್ತೆಯಾದವರು. ನಾಪತ್ತೆಯಾದ ದಿನೇಶ್ ಗಾಗಿ ಕಳೆದ ಐದು ದಿನಗಳಿಂದ ಮನೆಯವರು ಹುಡುಕಾಡದ ಸ್ಥಳವಿಲ್ಲ. ಆದರೆ ಇವರು ಎಲ್ಲೂ ಪತ್ತೆಯಾಗಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ದಿನೇಶ್‌, ತಮ್ಮ ನೆಚ್ಚಿನ ನಟನ ಸಾವಿನ ಬಗ್ಗೆ ಟಿ.ವಿಯಲ್ಲಿ ಸುದ್ದಿಯನ್ನು ನೋಡುತ್ತಿದ್ದರು‌. ಆಗ ಹೊರ ಹೊರಟವರು ಇನ್ನೂ ಮನೆಗೆ ವಾಪಸ್‌ ಬಂದಿಲ್ಲ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದ ದಿನೇಶ್ ಅವರು, ಕಾರ್ಕಳದ ರಾಧಿಕಾ ಥಿಯೇಟರ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ನಟ ಪುನೀತ್‌ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಇವರು, ಲಾಕ್‌ಡೌನ್‌ ಬಳಿಕ ಕಾರ್ಕಳದ ದಾನಶಾಲಾ ವರ್ಧಮಾನ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದರು. 

ಪುನೀತ್ ಅನಾರೋಗ್ಯ ಹಾಗೂ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ತಮ್ಮ ವಸ್ತುಗಳು ಹಾಗೂ ಮೊಬೈಲನ್ನು ಲಾಡ್ಜಿನಲ್ಲಿ ಬಿಟ್ಟು, ಹೊರಗೆ ಹೋಗಿದ್ದಾರೆ. ಆದರೆ ಅವರು ಅಂದು ಪತ್ತೆ ಆಗಲೇ ಇಲ್ಲ. ನಾಪತ್ತೆಯಾಗಿರುವ ದಿನೇಶ್, ಪುನೀತ್ ಅಂತಿಮ ಯಾತ್ರೆ ನೋಡಲು ಬೆಂಗಳೂರಿಗೆ ತೆರಳಿರಬಹುದು ಎಂದು ಎಕ್ಲರೈ ಊಹಿಸಿದ್ದರು. ಆದರೆ ಆ ಬಳಿಕ‌ ಐದು ದಿನಗಳಾದರೂ ಅವರು ಪತ್ತೆಯಾಗಲೇ ಇಲ್ಲ. ಇದು ಕುಟುಂಬಸ್ಥರಲ್ಲಿ ಆತಂಕ ತಂದಿದೆ. 

ಇದೀಗ ಪತಿ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಸುಮಾ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೆ ಎರಡು ಮೂರು ಬಾರಿ ಮನೆಯಿಂದ ತೆರಳಿದ್ದ ದಿನೇಶ್ ಮತ್ತೆ ವಾಪಸ್‌ ಆಗಿದ್ದರಿಂದ ಮೊದಮೊದಲಿಗೆ ಕುಟುಂಬದವರು ಈ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಐದು ದಿನವಾದರೂ ಪತ್ತೆ ಇಲ್ಲದ್ದು, ಹಾಗೂ ಪುನೀತ್‌ ಸಾವಿನಿಂದ ಬಹಳ ನೊಂದುಕೊಂಡಿದ್ದರಿಂದ ಮನೆಮಂದಿಯಲ್ಲಿ ಆತಂಕ ಮನೆಮಾಡಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಿನೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu