ಮಹಾರಾಷ್ಟ್ರ: ಶಿರ್ಡಿ ಸಾಯಿಬಾಬಾ ಮಂದಿರಕ್ಕೆ ತೆರಳುತ್ತಿದ್ದ ಕರ್ನಾಟಕದ ಭಕ್ತರ ವಾಹನ ಭೀಕರ ಅಪಘಾತವಾಗಿ, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಲಾ ತಾಲೂಕಿನ ಪಾಂಡೆ ಗ್ರಾಮದ ಬಳಿ ಬುಧವಾರ ಮುಂಜಾನೆ ದುರಂತ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಕರ್ನಾಟಕ ರಾಜ್ಯದವರು. ಆದರೆ ಅದೃಷ್ಟವಶಾತ್ ಅಪಘಾತದಲ್ಲಿ 8 ತಿಂಗಳ ಹಸುಗೂಸು ಬದುಕುಳಿದಿದೆ.
ಕಲಬುರಗಿಯ ಶ್ರೀಶೈಲ ಚಂಡೇಶ ಕುಂಬಾರ (56) ಶಶಿಕಲಾ ಶ್ರೀಶೈಲ ಕುಂಬಾರ (50) ಬಾಗಲಕೋಟೆಯ ಜ್ಯೋತಿ ದೀಪಕ್ ಹಿರೇಮಠ (38) ಸ್ಥಳದಲ್ಲೇ ಮೃತಪಟ್ಟರೆ, ಹುಬ್ಬಳ್ಳಿಯ ಶಾರದಾ ದೀಪಕ್ ಹಿರೇಮಠ (70) ತೀವ್ರವಾಗಿ ಗಾಯಗೊಂಡು ಕರ್ಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಸುನೀಗಿದ್ದಾರೆ.
ಕರ್ನಾಟಕದ ಕಲಬುರಗಿಯಿಂದ 8 ಮಂದಿ ಭಕ್ತರು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಲೆಂದು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಕರ್ಮಲ ತಾಲೂಕಿನ ಪಾಂಡೆ ಗ್ರಾಮದ ಬಳಿ ಕಾರು ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಂಟೈನರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತು ಎಂದರೆ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬೆಳ್ಳಂಬೆಳಗ್ಗೆ ನಡೆದ ಅಪಘಾತದ ದೊಡ್ಡ ಸದ್ದು ಕೇಳಿದ ಗ್ರಾಮದ ಕೆಲವರು ಸ್ಥಳಕ್ಕೆ ಬಂದು ಕಾರಿನಲ್ಲಿದ್ದವರನ್ನು ಹೊರತೆಗೆದಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪೈಕಿ ತೀವ್ರ ಗಾಯಗೊಂಡಿದ್ದ ಶಾರದಾ ದೀಪಕ್ ಎಂಬುವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಾಗ ಮೃತಪಟ್ಟಿದ್ದಾರೆ.