-->
oppose to lockdown continuation - ಉಸ್ತುವಾರಿ ಸಚಿವರಿಗೆ ಜನರ ಸಂಕಷ್ಟ ಗೊತ್ತಿಲ್ಲ: ಲಾಕ್‌ಡೌನ್ ಮುಂದುವರಿಕೆಗೆ ವಿರೋಧ

oppose to lockdown continuation - ಉಸ್ತುವಾರಿ ಸಚಿವರಿಗೆ ಜನರ ಸಂಕಷ್ಟ ಗೊತ್ತಿಲ್ಲ: ಲಾಕ್‌ಡೌನ್ ಮುಂದುವರಿಕೆಗೆ ವಿರೋಧ




ಈಗಾಗಲೆ ಎರಡು ತಿಂಗಳ ಕಾಲದ ಲಾಕ್ ಡೌನ್ ನಿಂದ ಕರಾವಳಿ ಜಿಲ್ಲೆಗಳು ತತ್ತರಿಸಿ ಹೋಗಿವೆ. ಹೆಚ್ಚಿನ ಜನರು ದಿನಸಿ ಕೊಂಡುಕೊಳ್ಳಲೂ ಆಗದ ಸ್ಥಿತಿ ತಲುಪಿದ್ದಾರೆ. ಮನೆ ಬಾಡಿಗೆ, ಮುಂದಿನ ದಿನಗಳಲ್ಲಿ ಪಾವತಿಸಬೇಕಾದ ಮನೆ ತೆರಿಗೆ, ಶಾಲಾ ಫೀಸು, ವಿದ್ಯುತ್ ಬಿಲ್ ಗಳ ಬಾಕಿ ಅವರನ್ನು ನಿದ್ರೆಯಿಲ್ಲದ ರಾತ್ರಿಗಳಿಗೆ ದೂಡಿದೆ.



ಜವಳಿ, ಪಾದರಕ್ಷೆ, ಶೃಂಗಾರ,ಆಹಾರ.. ಸಹಿತ ವಿವಿಧ ವ್ಯಾಪಾರಗಳಲ್ಲಿ ಬ್ಯಾಂಕ್ ಸಾಲ, ಕೈ ಸಾಲ ಮಾಡಿ ಬಂಡವಾಳ ಹಾಕಿ ಈಗ ವ್ಯಾಪಾರ ಮಾಡಲಾಗದೆ ಕೈ ಸುಟ್ಟುಕೊಂಡು ಕೂತಿರುವ ಸಾವಿರಾರು ಜನರು ಬದುಕೇ ಮುಗಿದು ಹೋದಂತೆ ಕಂಗೆಟ್ಟಿದ್ದಾರೆ.






ಬಸ್ಸು, ಟ್ಯಾಕ್ಸಿ ಸಹಿತ ಸಾರ್ವಜನಿಕ ಸಾರಿಗೆಯಲ್ಲಿ ತೊಡಗಿಸಿಕೊಂಡಿರುವ ಮಾಲಕರು,ನೌಕರರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಇವರ್ಯಾರಿಗೂ ಯಾವುದೇ ಆದಾಯ, ಪರಿಹಾರ, ರಿಯಾಯಿತಿಗಳನ್ನು ಸರಕಾರ ಘೋಷಿಸಿಲ್ಲ. ಇಂತಹ ಜನ ವಿಭಾಗಗಳ ಸಮಸ್ಯೆ ಅಕ್ಕಿ, ಬೇಳೆ, ತರಕಾರಿ ಮಾತ್ರ ಅಲ್ಲ. ಇನ್ನಷ್ಟು ದಿನ ಈ ವಿಭಾಗಗಳ ದುಡಿಮೆ, ವ್ಯಾಪಾರಕ್ಕೆ ಲಾಕ್ ಡೌನ್ ಹೆಸರಿನಲ್ಲಿ ಜಿಲ್ಲಾಡಳಿತ ನಿಷೇಧ ಮುಂದುವರಿಸಿದರೆ ಮುಂದಕ್ಕೆ ಚೇತರಿಸಿಕೊಳ್ಳಲಾರದಷ್ಟು ಹೊಡೆತ ತಿನ್ನಲಿದ್ದಾರೆ.


ಹಾಗಿರುತ್ತಾ,ಈ ಯಾವ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳ ಕುರಿತೂ ಅಧ್ಯಯನಗಳನ್ನು ನಡೆಸದೆ, ಈಗಾಗಲೆ ಇಳಿಕೆ ಪ್ರವೃತ್ತಿಯಲ್ಲಿರುವ ಸೋಂಕನ್ನು ನಿಯಂತ್ರಣಕ್ಕೆ ತರಲು ಬೇರೆ ಹಲವು ದಾರಿಗಳು ಇದ್ದರೂ ಅವುಗಳ ಕುರಿತು ಚರ್ಚಿಸದೆ, ರಾಜ್ಯ ಸರಕಾರದ ಮುಂದೆ ಜಿಲ್ಲೆಗೆ ಸೀಮಿತವಾಗಿ ಲಾಕ್ ಡೌನ್ ಮುಂದುವರಿಸಲು ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಮನವಿ ಮಾಡುವುದು ಅವರ ಘೋರ ವೈಫಲ್ಯ ಹಾಗೂ ರಾಜಕೀಯ ಉಡಾಫೆತನವನ್ನು ಎತ್ತಿ ತೋರಿಸುತ್ತದೆ.





ಜಿಲ್ಲೆಯಲ್ಲಿ ಕೊರೋನ ಪಾಸಿಟಿವಿಟಿ ದರ ಉಳಿದ ಜಿಲ್ಲೆಗೆ ಹೋಲಿಸಿದರೆ ಇನ್ನೂ ಹೆಚ್ಚಿರುವುದಕ್ಕೆ ಅಧಿಕಾರಿಗಳ ಜೊತೆಗೆ ತಂಡವಾಗಿ ನಿಂತು ಕಾರ್ಯಾಚರಣೆಗೆ ಇಳಿಯದ ಸಚಿವರ ಜನಪ್ರತಿನಿಧಿಗಳ ನಿರಾಶಾದಾಯಕ ಪ್ರವೃತ್ತಿಯೂ ಪ್ರಧಾನ ಕಾರಣ. ಆಡಳಿತ ಪಕ್ಷದ ಬೆಂಬಲವುಳ್ಳ ಮಂಗಳೂರಿನ ಪ್ರಬಲ ಖಾಸಗಿ ಮೆಡಿಕಲ್ ಲಾಬಿ ಸರಕಾರದ ನಿಯಮಗಳನ್ನು ಸಾರ ಸಗಟಾಗಿ ಕಡೆಗಣಿಸಿ ಸೋಂಕಿತರಿಗೆ ಸರಕಾರಿ ಕೋಟಾ ಹಾಗು ದರದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ ತೀರಾ ದುಬಾರಿ ಬಿಲ್ ಗಳನ್ನು ನೀಡತೊಡಗಿದ್ದೇ ಸೋಂಕಿತರು ಆಸ್ಪತ್ರೆಗಳತ್ತ ಬರಲು ಭಯ ಪಡುವಂತಾಯಿತು.




ಮನೆಗಳಲ್ಲೇ ಉಳಿದು ಸೋಂಕು ವ್ಯಾಪಕಗೊಳ್ಳಲು ಕಾರಣವಾಯಿತು. ಅಂತಹ ಸಂದರ್ಭದಲ್ಲಿ ಸರಕಾರಿ ಕೋಟಾದಲ್ಲಿ ಅಥವಾ ನಿಗದಿ ಪಡಿಸಿದ ದರದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಏಗಾಡುತ್ತಿದ್ದ ಜಿಲ್ಲಾಡಳಿತದ ಆಧಿಕಾರಿಗಳಿಗೆ ಉಸ್ತುವಾರಿ ಸಚಿವರ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಬಲವನ್ನು ಒದಗಿಸಲೆ ಇಲ್ಲ.ಇದು ಅಧಿಕಾರಿಗಳ ಅಸಹಯಾಕತೆಗೆ, ಖಾಸಗಿ ಆಸ್ಪತ್ರೆಗಳ ಮೆರೆದಾಟಕ್ಕೂ ಕಾರಣವಾಯಿತು. ಇಂತಹ ಸಂದರ್ಭದಲ್ಲಿ ಸಚಿವರು ಕೇವಲ ಕಾರ್ಯರೂಪಕ್ಕೆ ಬರದ ಸರಣಿ ಹೇಳಿಕೆಗಳಿಗಷ್ಟೇ ಸೀಮಿತರಾದರು.


ಮಂಗಳೂರು ನಗರ ವ್ಯಾಪ್ತಿಯಲ್ಲಿ ತೀವ್ರ ತರದ ಪರೀಕ್ಷೆ, ಸೋಂಕಿತರನ್ನು ಪ್ರತ್ಯೇಕಗೊಳಿಸುವುದು, ನೂಕು ನುಗ್ಗಲಿಲ್ಲದೆ ವ್ಯಾಕ್ಸಿನ್ ವಿತರಣೆ, ಸುಸಜ್ಜಿತ ಕೊರೋನ ಕೇರ್ ಸೆಂಟರ್ ಗಳನ್ನು ತೆರೆದು ಗಂಭೀರ ಲಕ್ಷಣಗಳಿಲ್ಲದ ಸೋಂಕಿತರಿಗೆ ವಿಶ್ವಾಸ ತುಂಬಿ ಕೇರ್ ಸೆಂಟರ್ ಗೆ ಸೇರಿಸುವಲ್ಲಿನ ವೈಫಲ್ಯದಲ್ಲಿ ಸಚಿವರ ಕೊಡುಗೆ ದೊಡ್ಡದಿದೆ. ಜಿಲ್ಲೆಯ ಜನಪ್ರತಿನಿಧಿಗಳ ಇಂತಹ ರಾಜಕೀಯ ವೈಫಲ್ಯಗಳನ್ನು ಲಾಕ್ ಡೌನ್ ಮುಂದುವರಿಸುವ ಅಗ್ಗದ ಗಿಮಿಕ್ ಮೂಲಕ ಸಚಿವರು ಮರೆಮಾಚಲು ಹೊರಟಿದ್ದಾರೆ.




ತೀರಾ ಗಂಭೀರ ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳಿಗೆ ಕಾರಣವಾಗಲಿರುವ ಜಿಲ್ಲೆಗೆ ಸೀಮಿತವಾದ ಲಾಕ್ ಡೌನ್ ಮುಂದುವರಿಕೆಯ ಆಲೋಚನೆಗಳನ್ನು ಉಸ್ತುವಾರಿ ಸಚಿವರು ಕೈ ಬಿಡಬೇಕು. ಬೆಂಗಳೂರು ಸಹಿತ ರಾಜ್ಯದ ವಿವಿದೆಡೆಗಳ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಲಾಕ್ ಡೌನ್ ತೆರವುಗೊಳಿಸಬೇಕು. 



ಕೊರೋನ ಪೂರ್ಣ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹೊರತಾದ,ಜನರ ದುಡಿಮೆಗೆ ಆವಕಾಶ ನಿರಾಕರಿಸದ ಇನ್ನಿತರ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ‌ ಮುಂದುವರಿಸಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Posts

Ads on article

Advertise in articles 1

advertising articles 2

Advertise under the article