-->
ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗೆ ಮಹಾಪೋಷಕ ಪ್ರಶಸ್ತಿ ಪ್ರದಾನ!

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗೆ ಮಹಾಪೋಷಕ ಪ್ರಶಸ್ತಿ ಪ್ರದಾನ!

ನಾನು ಪಟ್ಲರ ಮೇಳಕ್ಕೆ ಬೆಳ್ಳಿ ತೊಟ್ಟಿಲು ನೀಡಿದ ಬಳಿಕ ಬಹಳಷ್ಟು ಅಭಿವೃದ್ಧಿಯನ್ನು ಕಂಡೆ!” -ಡಾ.ಕೆ.ಪ್ರಕಾಶ್ ಶೆಟ್ಟಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮ ಸಂಭ್ರಮದ ಸಭಾ ಕಾರ್ಯಕ್ರಮ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. 


ಬಳಿಕ ಮಾತಾಡಿದ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ಸತೀಶ್ ಪಟ್ಲರಿಗೆ ಅವರ ಕಂಠವೇ ದೇವರು, ಆದರೆ ಯಕ್ಷಗಾನ ಕಲಾವಿದರಿಗೆ ಸತೀಶ್ ಪಟ್ಲರೇ ದೇವರು. ಯಕ್ಷಗಾನ ಕಲಾವಿದರು ತಮ್ಮ ಕಷ್ಟವನ್ನು ಬದಿಗಿರಿಸಿ ಜನರಿಗೆ ಮನೋರಂಜನೆ ನೀಡುತ್ತಾರೆ ಎಂದಿಗೂ ಯಾರ ಮುಂದೆಯೂ ಕೈಚಾಚುವುದಿಲ್ಲ. ಅವರ ಸ್ವಾಭಿಮಾನದ ಬದುಕು ಹಾಗಿರುತ್ತದೆ, ಇಂತಹ ಕಲಾವಿದರಿಗೆ ನೆರವಾಗಲು ಯಕ್ಷಧ್ರುವ ಪಟ್ಲ ಟ್ರಸ್ಟ್ ಸ್ಥಾಪಿಸಿ ರಾತ್ರಿ ಹಗಲು ಕಲಾವಿದರ ನೋವಿಗೆ ಸ್ಪಂದಿಸಿದರು. ಅವರು ಪ್ರಾರಂಭದಲ್ಲಿ ನನ್ನ ಬಳಿ ತೊಟ್ಟಿಲು ಕೇಳಿದಾಗ ನಾನು ಹಿಂದೆ ಮುಂದೆ ಯೋಚಿಸದೆ ಬೆಳ್ಳಿ ತೊಟ್ಟಿಲು ನೀಡಿದೆ. ಆದರೆ ನಂತರ ನನ್ನ ಜೀವನದಲ್ಲಿ ವ್ಯವಹಾರದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡೆ. ನಾವೆಲ್ಲರೂ ಅವರು ಮಾಡುವ ಒಳ್ಳೆಯ ಕೆಲಸಕ್ಕೆ ಕೈಜೋಡಿಸೋಣ. ಅವರ ಸಮಾಜಮುಖಿ ಚಿಂತನೆ, ಕಾರ್ಯಗಳು ಹೀಗೆಯೇ ಮುಂದುವರಿಯಲಿ“ ಎಂದರು.


2025ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ-ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು. 
ಸನ್ಮಾನ ಸ್ವೀಕರಿಸಿ ಮಾತಾಡಿದ ಐಕಳ ಹರೀಶ್ ಶೆಟ್ಟಿ ಅವರು, “ಪಟ್ಲ ಸತೀಶ್ ಶೆಟ್ಟಿಯವರು ಕಟೀಲು ದುರ್ಗೆಯ ದೊಡ್ಡ ಭಕ್ತರು. ವರ್ಷದಲ್ಲಿ 6 ತಿಂಗಳು ಯಕ್ಷಗಾನ ಕಲಾವಿದರಾಗಿ ದುಡಿಯುವವರು ನಂತರದ 6 ತಿಂಗಳು ಜೀವನ ನಿರ್ವಹಣೆಗೆ ಕಷ್ಟ ಪಡುವುದನ್ನು ನೋಡುತ್ತೇವೆ. ಅಂತಹ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಪಟ್ಲ ಫೌಂಡೇಶನ್ ಸ್ಥಾಪಿಸಿ ಸಾವಿರಾರು ಕಲಾವಿದರಿಗೆ ನೆರವು ನೀಡಿದ್ದಾರೆ. ನಾನು ಜೀವನ ಪೂರ್ತಿ ಈ ಸಂಘಟನೆಯ ಜೊತೆಯಲ್ಲಿ ಇರುತ್ತೇನೆ. ಸನ್ಮಾನ ಮಾಡುವುದಕ್ಕಿಂತ ಅದರ ಹಿಂದಿರುವ ಪ್ರೀತಿ ಮುಖ್ಯವಾದುದು. ಎಲ್ಲಾ ಧರ್ಮಗಳು ಕೂಡಾ ಸಹಬಾಳ್ವೆಯಿಂದ ತುಳುನಾಡಿನಲ್ಲಿ ಬದುಕುವಂತಾಗಲಿ. ಪಟ್ಲ ಒಂದು ಶಕ್ತಿ ಅದಕ್ಕೆ ಇನ್ನಷ್ಟು ಶಕ್ತಿ ತುಂಬಲು ಯುವಕರು ಮುಂದೆ ಬರಲಿ“ ಎಂದರು. 


ವೇದಿಕೆಯಲ್ಲಿ ವಕ್ವಾಡಿ ಪ್ರವೀಣ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ದುಬೈ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ತಲ್ಲೂರ್ ಶಿವರಾಮ ಶೆಟ್ಟಿ, ಬಿಬಿಎಂಪಿ ಅಪರ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಶಶಿಧರ್ ಶೆಟ್ಟಿ ಬರೋಡ, ಉದ್ಯಮಿ ವೇಣುಗೋಪಾಲ್ ಶೆಟ್ಟಿ ಥಾಣೆ, ಬೆಳ್ಳಾಡಿ ಅಶೋಕ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ರವೀಂದ್ರ ನಾಥ್ ಭಂಡಾರಿ, ಶಶಿಧರ್ ಶೆಟ್ಟಿ ಇನ್ನಂಜೆ, ಗಿರೀಶ್ ಶೆಟ್ಟಿ ತೆಳ್ಳಾರ್, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಪೆರಾರ ಬಾಬಣ್ಣ, ಪುತ್ತಿಗೆ ಮಠ ಯುಎಸ್ ಎ ಅರ್ಚಕ ಕಿರಣ್ ರಾವ್, ಗಿರೀಶ್ ಎಂ  ಶೆಟ್ಟಿ ಕಟೀಲ್, ಸುಧಾಕರ ಎಸ್ ಪೂಂಜ ಸುರತ್ಕಲ್, ದಯಾನಂದ ಶೆಟ್ಟಿ ಆಸ್ಟ್ರೇಲಿಯಾ, ಡಾ.ಆರ್.ಕೆ.ಶೆಟ್ಟಿ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಕದ್ರಿ ನವನೀತ ಶೆಟ್ಟಿ,  ಕದ್ರಿ ಪ್ರದೀಪ್ ಆಳ್ವ, ಬಾಳ ಜಗನ್ನಾಥ ಶೆಟ್ಟಿ, ರವಿಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 
ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article