-->
1000938341
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ




ಮಂಡ್ಯ: ಪತಿ ಹಾಗೂ ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆ‌ರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. 

ಲಿಂಗಾಪುರ ಗ್ರಾಮದ ಪ್ರೇಮಕುಮಾರಿ(26) ಆತ್ಮಹತ್ಯೆ ಮಾಡಿಕೊಂಡವರು.

ಮಾ.20ರಂದು ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಆಕೆಯ ತಂದೆ ರಾಜೇಂದ್ರ ತಮ್ಮ ಪುತ್ರಿಯ ಪತಿ ಹಾಗೂ ಅವರ ಮನೆಯವರ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರೇಮಕುಮಾರಿ ಪತಿ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ರಾಘವೇಂದ್ರ, ಆತನ ತಂದೆ ಕುಮಾರಸ್ವಾಮಿ, ತಾಯಿ ಅರುಣಾ, ಅಕ್ಕ ರಂಜಿತಾ, ಭಾವ ಯತೀಶ, ಸಂಬಂಧಿಗಳಾದ ಉಮೇಶ ಮತ್ತು ಕೊಟ್ರೇಶ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

2022 ಮಾರ್ಚ್ 6 ರಂದು 150 ಗ್ರಾಂ ಚಿನ್ನಾಭರಣ, 5 ಲಕ್ಷ ರೂ. ವರದಕ್ಷಿಣೆ ನೀಡಿ ರಾಘವೇಂದ್ರನಿಗೆ ಪುತ್ರಿಯನ್ನು ವಿವಾಗ ಮಾಡಲಾಗಿತ್ತು. ಮದುವೆಯಾದ ಆರು ತಿಂಗಳ ಬಳಿಕ, ಅಳಿಯ ಮತ್ತು ಮನೆಯವರು ನನ್ನ ಪುತ್ರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರೇಮಕುಮಾರಿ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳ ತಾಳಲಾರದೆ ಪುತ್ರಿ ನಮ್ಮ ಮನೆಗೆ ಬಂದಿದ್ದಳು. ನ್ಯಾಯ ಪಂಚಾಯತಿಗೆ ಮಾಡಿದರೂ ಪತಿ ಮನೆಯವರು ಕರೆದುಕೊಂಡು ಹೋಗಲಿಲ್ಲ. ನಮ್ಮ ಮನೆಯಲ್ಲೇ ಇದ್ದುಕೊಂಡು ಕಾನೂನು ಕಾಲೇಜಿಗೆ ಪುತ್ರಿ ಸೇರಿಕೊಂಡಿದ್ದಳು. ಅಲ್ಲಿಗೂ ಹೋಗಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಹಾಗಾಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಜೇಂದ್ರ ದೂರಿದ್ದಾರೆ.

ತನಗೆ ಪತಿ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರೇಮಕುಮಾರಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article