-->

ಮದುವೆ ಸಮಾರಂಭದಲ್ಲಿ ಹಾರಿಸಿದ ಗುಂಡು ನೇರವಾಗಿ ಸೈನಿಕನ ಎದೆ ಸೀಳಿತು: ಮದುಮಗ ವಿರುದ್ಧ ದೂರು ದಾಖಲು

ಮದುವೆ ಸಮಾರಂಭದಲ್ಲಿ ಹಾರಿಸಿದ ಗುಂಡು ನೇರವಾಗಿ ಸೈನಿಕನ ಎದೆ ಸೀಳಿತು: ಮದುಮಗ ವಿರುದ್ಧ ದೂರು ದಾಖಲು

ಲಖನೌ: ಉತ್ತರ ಭಾರತೀಯರಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆ ಮಾಡಲು ಬಂದೂಕಿನಿಂದ ಗುಂಡು ಹಾರಿಸುವುದು ಸಾಮಾನ್ಯ. ಆದರೆ ಇಂತಹ ಆಚರಣೆಗಳು ಕೆಲವೊಮ್ಮೆ ದುರಂತದಲ್ಲಿ ಕೊನೆಗೊಳ್ಳುವುದು ವಿಪರ್ಯಾಸವೇ ಸರಿ. 

ಇದೀಗ ಮದುವೆ ಸಂಭ್ರಮದಲ್ಲಿದ್ದವರಿಗೆ ಮದುಮಗನೇ ಶಾಕ್​​ ನೀಡಿರುವ ಘಟನೆಯೊಂದು ನಡೆದಿದೆ. ಈ ಮದುವೆ ಸಮಾರಂಭದಲ್ಲಿ ಮದುಮಗನಿಂದಲೇ ಅಪರಾಧ ಕೃತ್ಯ ನಡೆದುಹೋಗಿದೆ. ಸಂತೋಷಕ್ಕಾಗಿ ಹಾರಿಸಿರುವ ಗುಂಡೊಂದು ನೇರವಾಗಿ ಆತನ ಸ್ನೇಹಿತ ಎದೆಯನ್ನು ಸೀಳಿದೆ. ಪರಿಣಾಮ ಆತ ಮೃತಪಟ್ಟಿದ್ದಾನೆ.

ಉತ್ತರ ಪ್ರದೇಶದ ಸೊನ್ ಭದ್ರ ಜಿಲ್ಲೆಯ ಬ್ರಹ್ಮಾನಗರದಲ್ಲಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮದುಮಗ ಮನೀಶ್​ ಮಧೇಶಿಯಾ ಸುತ್ತಲೂ ಸ್ನೇಹಿತರು ಸೇರಿದಂತೆ ಹಲವಾರು ಮಂದಿ ನಿಂತಿದ್ದರು. ಈ ವೇಳೆ ಮದುಮಗ ಖುಷಿಗಾಗಿ ಗುಂಡು ಹಾರಿಸಿದ್ದಾನೆ. ಈ ಗುಂಡು ಅಲ್ಲೇ ನಿಂತಿದ್ದ ಆತನ ಸ್ನೇಹಿತ ಸೈನಿಕ ಬಾಬು ಲಾಲ್​ ಯಾದವ್​ ನಿಗೆ ತಗುಲಿದೆ. ದುರಂತವೆಂದರೆ ಈ ಗನ್​ ಕೂಡ ಮೃತ ಯಾದವ್​​ನದ್ದೇ ಆಗಿದೆ. 

ತಕ್ಷಣ ಯಾದವ್​ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಅಮರೇಂದ್ರ ಪ್ರತಾಪ್​ ಸಿಂಗ್​ ತಿಳಿಸಿದ್ದಾರೆ. ಇದೀಗ ವರನ ವಿರುದ್ಧ ದೂರು ದಾಖಲಾಗಿದೆ.

ಯಾವುದೇ ಸಭೆ ಸಮಾರಂಭಗಳಲ್ಲಿ ಈ ರೀತಿ ಬಂದೂಕು ಬಳಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಒಂದು ವೇಳೆ ಬಳಸಿದರೂ ಅನುಮತಿ ಪಡೆದಿರಬೇಕಿದೆ. ಇದು ಗೊತ್ತಿದ್ದರೂ ಪದೇ ಪದೇ ಇಂತಹ ಅಚಾತುರ್ಯ ಘಟನೆಗಳು ನಡೆಯುತ್ತಲೇ ಇದೆ.

Ads on article

Advertise in articles 1

advertising articles 2

Advertise under the article